।। ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ ।
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ।।

ಓಂಕಾರ ಸಮಿತಿ (ಓಮಾನ್ ಕರ್ನಾಟಕ ಆರಾಧನಾ ಸಮಿತಿ) ಕಳೆದ 12 ವರ್ಷಗಳಿಂದ ಮಸ್ಕತ್ನಲ್ಲಿ ನೆಲಸಿರುವ ಕನ್ನಡಿಗರಿಗೆಂದೇ ಭಕ್ತಿ, ಜ್ಞಾನ ಹಾಗೂ ಸಂಗೀತವೆನ್ನುವ ತತ್ವಗಳೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ವರ್ಷ 'ಓಂಕಾರ ಜ್ಞಾನಾಮೃತ-2024‘ ದ ಕಾರ್ಯಕ್ರಮವು ಸನಾತನ ಸಂಸ್ಕೃತಿ - ಧರ್ಮವೋ ಅಥವಾ ವಿಜ್ಞಾನವೋ..?! ಎಂಬ ವಿಷಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರ (ರಾಮಕ್ರೃಷ್ಣ – ವಿವೇಕಾನಂದ ಆಶ್ರಮ, ತುಮಕೂರು) ಉಪನ್ಯಾಸದೊಂದಿಗೆ ಹಾಗೂ ಶ್ರೀ ಪರಮಾನಂದಜೀ ಓಂ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಾರ್ಚ್ 15 ರಂದು ಮಸ್ಕತ್ತಿನ ಶ್ರೀಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಅದ್ಭುತವಾಗಿ ಮೂಡಿಬಂತು.

ಮೊದಲನೆಯದಾಗಿ ಶ್ರೀಯುತ ರವಿಕುಮಾರ್ ರವರು ತಮ್ಮ ಸ್ವಾಗತ ಭಾಷಣದ ಮೂಲಕ, ಅಲ್ಲಿ ಆಗಮಿಸಿರುವ ಎಲ್ಲಾ ಆಹ್ವಾನಿತ ಗಣ್ಯ ಅಥಿತಿಗಳಿಗೆ ಹೂಗುಚ್ಚವನ್ನು ನೀಡಿ ಸ್ವಾಗತಿಸಲಾಯಿತು. ಅದೇ ಸಂದರ್ಭದಲ್ಲಿ ‘ಓಂಕಾರ’ ಸಮಿತಿಯು ನಡೆಸುವ ಎಲ್ಲಾ ಕಾರ್ಯಕ್ರಮಗಳ ಕಿರು ಪರಿಚಯವನ್ನು ಸಹ ಮಾಡಿಸಿಕೊಟ್ಟರು.
ನಂತರ ಶ್ರೀಯುತ ಅರುಣಕುಮಾರರವರು ಗಣಪತಿ ಹಾಗೂ ಓಂಕಾರ ಆಂಜನೇಯನಿಗೆ ಆರತಿಮಾಡುವ ಮೂಲಕ ಹಾಗೂ ಓಂಕಾರ ಮಹಿಳಾ ವೃಂದದವರಿಂದ ಶ್ಲೋಕಗಳೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಶ್ರೀಮತಿ ಉಷಾಹರ್ಷ ಅವರು ಮುಖ್ಯ ಅಥಿತಿಗಳ ಪರಿಚಯದೊಂದಿಗೆ ಕಾರ್ಯಕ್ರಮದ ನಿರೂಪಣೆ ವಹಿಸಿಕೊಂಡಿದ್ದರು.

ತದನಂತರ ಶ್ರೀಪರಮಾನಂದಜೀ ಓ೦ ಸ್ವಾಮೀಜಿಯವರನ್ನು ಶ್ರೀ ಜಿ.ವಿ.ರಾಮಕ್ರೃಷ್ಣ ಹಾಗು ಶ್ರೀ ರಾಜೇಂದ್ರ ಕಾಮತರವರು ಮತ್ತು ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿಯವರನ್ನು ಶ್ರೀ ಹಿರಿಯಣ್ಣ ಹಾಗೂ ಶ್ರೀ ಶಶಿಧರ್ ಶೆಟ್ಟಿಯವರು ವೇದಿಕೆಗೆ ಕರೆತಂದರು.
ಸರಿಯಾದ ಸಮಯಕ್ಕೆ ಶ್ರೀ ಶ್ರೀ ವೀರೇಶಾನಂದ ಸರಸ್ವತಿಯವರ ಉಪನ್ಯಾಸವನ್ನು ಸಭಿಕರು ಒಳಗೊಂಡಂತೆ ಶ್ರೀಗಳು ತಮ್ಮ ಭಜನೆಯ ಮೂಲಕ ಅರಂಭಿಸಿದರು. ಸನಾತನ ಸಂಸ್ಕೃತಿ ಎಂಬ ಗಹನವಾದ, ಗಂಭೀರವಾದ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಸನಾತನದ ಮೂಲದಿಂದ ಈಗಿನ ಮನುಷ್ಯನವರೆಗೆ ಯಾವ ಯಾವ ರೀತಿಯಲ್ಲಿ ಮನುಷ್ಯನ ವಿಕಾಸವಾಗಿದೆ, ಮನುಷ್ಯ ತಾನು ಈಗಿರುವ ಸಾಮಾನ್ಯ ಸ್ಥಿತಿಯಿಂದ ಅದ್ಭುತ ವ್ಯಕ್ತಿಯಾಗುವುದಕ್ಕೆ ಯಾವವೂಂದು ವಿಕಾಸದ ಬೇರೆ ಬೇರೆ ಹಂತಗಳು ಬೇಕಿದೆ, ಅದನ್ನು ಸಾಧಿಸುವುದಕ್ಕೆ ಏನು ಮಾಡಬೇಕು ಈ ವಿವರಣೆಯೇ ಸನಾತನ ಸಂಸ್ಕೃತಿ ಎಂದು ತಿಳಿಸಿಕೊಟ್ಟರು. ವ್ಯಕ್ತಿಯಿಂದ ಮತ, ತತ್ವದಿಂದ ಧರ್ಮ, ಭಾರತೀಯರು ಧಾರ್ಮಿಕರು, ಧರ್ಮ ಅಂದರೆ “Being and Becoming” ಅನ್ನುವ ಮೂಲಕ ಯಾವುದೇ ಧರ್ಮದ ಮೂಲ ಉಪನಿಷತ್ತುಗಳು, ಪ್ರಸ್ತಾನತ್ರಯಗಳಾದ ವೇದೋಪನಿಷತ್ತು, ಭಗವದ್ಗೀತೆ ಹಾಗೂ ಬ್ರಹ್ಮ ಸೂತ್ರಗಳು ನಮಗೆ ಹೇಗೆ ಧರ್ಮದ ಆಧಾರಗಳು ಎಂಬುದನ್ನು ತಮ್ಮ ಮಾತುಗಳಲ್ಲಿ ಸರಳವಾಗಿ ಸಭಿಕರಿಗೆ ಅರ್ಥವಾಗುವಂತೆ ಹೇಳಿಕೊಟ್ಟರು.

ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು” ಎಂಬ ತತ್ವದ ಆಧಾರ ಸನಾತನ ಸಂಸ್ಕೃತಿ, ಈ ಸನಾತನ ಸಂಸ್ಕೃತಿಯು ಯಾವುದೇ ಒಂದು ಮತ ಮತ್ತು ಧರ್ಮಕ್ಕೆ ಸೀಮಿತವಲ್ಲ ಎಂದರು. ತಾವು ತಮ್ಮ ಶಾಲಾ ದಿನಗಳಲ್ಲಿ ಕಲಿತ “ ಸೋಮೇಗೌಡರ ನಾಯಿ” ಎಂಬ ಕಥೆಯ ಮೂಲಕ ಸನಾತನ ಸಂಸ್ಕೃತಿಯನ್ನು ಗುರುತಿಸುವ ಬಗೆ ಮತ್ತು ಧರ್ಮ ಹಾಗೂ ಮತದ ವ್ಯತ್ಯಾಸಗಳು, ಮೊದಲು ನಾವು ಧಾರ್ಮಿಕರು, ನಿನ್ನ ಉದ್ಧಾರ ನನ್ನಲ್ಲಿ, ಪ್ರಯತ್ನವೇ ಪರಮಪೂಜೆ  ಪರಮೇಶ್ವರ ಪ್ರಾಪ್ತಿ ಎಂದು ಮೂರ್ತಿಪೂಜೆಯಲ್ಲಿನ  ಮಹತ್ವವನ್ನು ವಿವರಿಸುತ್ತಾ  “ಎಲ್ಲಿ ಧರ್ಮವೋ  ಅಲ್ಲಿ ಜಯ”ಎಂದು ಹೇಳಿಕೊಟ್ಟರು.
ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಂದೆ ವಿಜ್ಞಾನದ ಬುನಾದಿ  ಧರ್ಮ ಹಾಗೂ Material Science, Big Bang Theory, Modern Physics ಮುಂತಾದ ವೈಜ್ಞಾನಿಕ ವಿಷಯಗಳಿಗೆ ಹೇಗೆ ಸನಾತನವೇ ಮೂಲ, ಸನಾತನಕ್ಕೂ ಹಾಗು ವಿಜ್ಞಾನಕ್ಕೂ ಇರುವ ಸಂಬಂಧವನ್ನು, ‘ಸನಾತನ supports change’  ಎಂಬುದನ್ನು ತಮ್ಮ ವಾಗ್ಚರಿಯಲ್ಲಿ ಬಹಳ ಅದ್ಭುತವಾಗಿ ಸಭಿಕರಿಗೆಲ್ಲ ಅರ್ಥೈಸಿದರು. ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮದೇ ಶೈಲಿಯಲ್ಲಿ, ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಜ್ಞಾನದ ಹೊಳೆಯನ್ನೇ  ಹರಿಸಿದರೆಂದರೆ ತಪ್ಪಾಗಲಾರದು.

ಉಪನ್ಯಾಸದ  ಕೊನೆಯಲ್ಲಿ ಶ್ರೀಗಳು ತಮ್ಮ ಪೂರ್ವ ಜ್ಞಾನ ಭಂಡಾರದಿಂದ, ಸನಾತನ ಸಂಸ್ಕೃತಿ ಎಂಬ ಆಳವಾದ ವಿಷಯದ ಕುರಿತ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಭಿಕರ ಅನುಮಾನವನ್ನು ಬಹಳ ಅಚ್ಚುಕಟ್ಟಾಗಿ ಪರಿಹರಿಸಿದರು. 
ಶ್ರೀ ಶ್ರೀ ವೀರೇಶಾನಂದ ಸರಸ್ವತಿಯವರ  ಉಪನ್ಯಾಸ ಮುಗಿಯುತ್ತಿದಂತೆ ,ಸಭಿಕರೆಲ್ಲರೂ ಎದ್ದು ನಿಂತು ಕರತಾಡನದ  ಮೂಲಕ ಶ್ರೀಗಳಿಗೆ ಗೌರವ ಸೂಚಿಸಿದರು. ನಂತರ ಶ್ರೀದ್ವಯರಿಗೆ ಭಕ್ತಿಪೂರ್ವಕ  ಗೌರವ ಸಮರ್ಪಣೆ ಮಾಡಲಾಯಿತು.

ಭಾರತೀಯ ಸಾಮಾಜಿಕ ವೇದಿಕೆ- ಕರ್ನಾಟಕ ವಿಭಾಗ, ಮಸ್ಕತ್  (ಕರ್ನಾಟಕ ಸಂಘ, ಮಸ್ಕತ್) ಆಡಳಿತ ಮಂಡಳಿಯಿಂದ ಶ್ರೀ ಪರಮಾನಂದಜೀ ಓಂ ಸ್ವಾಮೀಜಿ ಹಾಗೂ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಯವರಿಗೆ  ಸನ್ಮಾನಿಸಲಾಯಿತು. 
ಓಂಕಾರ  ಸಮಿತಿಯ ಪರವಾಗಿ ಶ್ರೀ ಪರಮಾನಂದಜೀ ಓಂ ಸ್ವಾಮೀಜಿಯವರಿಗೆ ಶ್ರೀ ಡಾ. ಅಂಚನ್, ಶ್ರೀ ಡಾ. ರಾಜೇಂದ್ರ ಕಾಮತ, ಶ್ರೀ ಗಣೇಶ ಶೆಟ್ಟಿ ಅವರಿಂದ ಶಾಲು, ಹೂಮಾಲೆ ಹಾಗೂ ಹಣ್ಣಿನ ಬುಟ್ಟಿಯನ್ನು ನೀಡಿ ಗೌರವಿಸಿದರೇ ಇನ್ನೂ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೆ ಶ್ರೀ ಹಿರಿಯಣ್ಣ, ಶ್ರೀ ಜಿ.ವಿ.ರಾಮಕೃಷ್ಣ ಹಾಗೂ ಶ್ರೀ ಶಶಿಧರ್ ಶೆಟ್ಟಿ ಅವರು ಶ್ರೀಗಳಿಗೆ ಶಾಲು ಹೊದಿಸಿ,  ಹೂಮಾಲೆ ಹಾಕಿ, ಹಣ್ಣಿನ ಬುಟ್ಟಿಯನ್ನು ಕೊಟ್ಟು ಗೌರವಿಸಿದರು.
ನಂತರ ಮಾನವೀಯತೆಯ ಸೇವಾಮೂರ್ತಿ ಶ್ರೀ ಪರಮಾನಂದಜೀ ಓಂ ಸ್ವಾಮೀಜಿಯವರಿಗೆ ಮಾನವೀಯ ಮೌಲ್ಯಗಳುಳ್ಳ ಕಾರ್ಯಕ್ರಮ, ತಮ್ಮ ಸೇವಾ ಜೀವನ, ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ, ಅವರ ಅಪಾರವಾದ ಸೇವೆಯನ್ನು ಪರಿಗಣಿಸಿ, ಹಾಗೆಯೇ ಸಾಕ್ಷಾತ್ ಶಾರದಾ ಪುತ್ರ- ವೇದಾಂತ ವೀರ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೂ, ವಿಧ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ, ದೀನರಿಗಾಗಿ ತಮ್ಮ ಕಾರ್ಯಾಗಾರಗಳ ಮೂಲಕ, ಪ್ರಾಚೀನ ಭಾರತೀಯ ಕೃತಿಗಳ ಪ್ರಚಾರ, ಸಂಗೀತ, ದೃಶ್ಯ, ಶ್ರವಣ, ಲೇಖಕಿ ಎಲ್ಲ ಮಾಧ್ಯಮದ ಮೂಲಕ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಹಾಗೂ ಸಲ್ಲಿಸಿರುವ ಅನುಪಮ ಸೇವೆಗೆ ಓಂಕಾರ ಸಮಿತಿಯು ಶ್ರೀ ದ್ವಯರಿಗೆ “ಓಂಕಾರ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಇದಾದ ನಂತರ “ಒಮಾನ್ ಕನ್ನಡಿಗರ ವೇದಿಕೆ” ಯ ವತಿಯಿಂದ ಒಮಾನ್ ಕನ್ನಡಿಗರಿಗಾಗಿ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಓಂಕಾರ ಸಮಿತಿಯ ಪರವಾಗಿ ಶ್ರೀ ರವಿಕುಮಾರ ರಾವ್ ಹಾಗೂ ಶ್ರೀ ಮಹೇಶ ಪುರೋಹಿತರವರಿಗೆ “ಸೇವಾರತ್ನ” ಪ್ರಶಸ್ತಿಯನ್ನು ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರ ಕರಕಮಲದಿಂದ ಕೊಡಿಸಿ ಗೌರವಿಸಲಾಯಿತು.
ಇದರ ಮುಂದುವರಿದ ಭಾಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಮಾನ್ ಕನ್ನಡಿಗ ಗಣ್ಯರಿಗೆ “ಸಾಧಕರು” ಪ್ರಶಸ್ತಿಯನ್ನು ನೀಡಲಾಯಿತು. ಈ ಸಾಧಕರ ಸಾಲಿನಲ್ಲಿ..
  • ಶ್ರೀ ಜಿ.ವಿ.ರಾಮಕೃಷ್ಣ ಮತ್ತು ಶ್ರೀಮತಿ ಡಾ. ಕವಿತಾ ರಾಮಕೃಷ್ಣ ರವರು,
  • ಶ್ರೀ ಶಶಿಧರ್ ಶೆಟ್ಟಿ ಮಲ್ಹಾರ ರವರು
  • ಶ್ರೀ ಹಿರಿಯಣ್ಣ ನಾರಾಯಣಸ್ವಾಮಿಯವರಿಗೆ  
ಈ ಪ್ರಶಸ್ತಿಯನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡುವ ಮೂಲಕ ಗಣ್ಯರಿಗೆ ಸನ್ಮಾನಿಸಲಾಯಿತು. 
ಒಮಾನ್ ಕನ್ನಡಿಗರ ವೇದಿಕೆಯಿಂದ ಶ್ರೀ ಪಿ.ಎಸ್. ರಂಗನಾಥ್ ಹಾಗೂ ಅದರ ಸದಸ್ಯರುಗಳಿಂದ  ಶ್ರೀದ್ವಯರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಗೆ ಶ್ರೀ ಶ್ರೀಧರ್ ಹೆಗಡೆ ಅವರಿಂದ ವಂದನಾರ್ಪಣಾ ಕಾರ್ಯಕ್ರಮ, ಇದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.


ಲೇಖನ : ಶ್ರೀಮತಿ ಉಷಾ ಹರ್ಷ